Coastal Bulletin

ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಶುಕ್ರವಾರ ಪ್ರತಿಷ್ಠೆಗೊಂಡ ಸ್ವರ್ಣಲೇಪಿತ ಪದ್ಮಾವತಿ ವಿಗ್ರಹವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮೂಲಕ ಭಕ್ತರು ಬಸದಿಗೆ ಸಮರ್ಪಿಸಿದರು.

ಬಂಟ್ವಾಳ: ಈ ಹಿಂದೆ ಭೂ ಮಸೂದೆ ಕಾಯ್ದೆ ಮೂಲಕ ಜಮೀನು ಕಳೆದುಕೊಂಡು ದುರ್ಬಲರಾಗಿದ್ದ ಜೈನ ಸಮುದಾಯ ವಿವಿಧ ಕ್ಷೇತ್ರಗಳಲ್ಲಿ ದುಡಿದು ಯಶಸ್ವಿ ಗಳಿಸಿದ ಪರಿಣಾಮ ಜೀರ್ಣಾವಸ್ಥೆಯಲ್ಲಿದ್ದ ಬಹುತೇಕ ಎಲ್ಲಾ ಬಸದಿಗಳು ಮರಳಿ ಗತ ವೈಭವ ಮೆರೆಯುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಇಲ್ಲಿನ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ ಪ್ರಯುಕ್ತ ಶುಕ್ರವಾರ ನಡೆದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. 

ಜಿಲ್ಲೆಯಲ್ಲಿ ಸುಮಾರು 500 ದೇವಸ್ಥಾನ ಮತ್ತು ದೈವಸ್ಥಾನಗಳ ಜೀರ್ಣೋದ್ದಾರಕ್ಕೆ ದರ್ಮಸ್ಥಳ ಕ್ಷೇತ್ರದಿಂದ ಆರ್ಥಿಕ ನೆರವು ನೀಡಲಾಗಿದ್ದು, ವಿಶ್ವಕ್ಕೆ ಅಹಿಂಸಾ ಮಾರ್ಗ ಸಿದ್ಧಾಂತದ ಕೊಡುಗೆ ಜೈನ ಧರ್ಮ ನೀಡಿದೆ ಎಂದರು. ಇದೇ ವೇಳೆ 'ಧರ್ಮಸಿರಿ" ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. 

ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಪ್ರಾಸ್ತಾವಿಕ ಮಾತನಾಡಿ, ಸುಮಾರು 500 ವರ್ಷಗಳ ಹಿನ್ನೆಲೆ ಹೊಂದಿರುವ ಇಲ್ಲಿನ ಬಸದಿಯಲ್ಲಿ 'ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ

1008 ಶ್ರೀ ಆದಿನಾಥ ತೀಥರ್ಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಮಹೋತ್ಸವ' ನಡೆಯುತ್ತಿದೆ ಎಂದರು.  

ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜರು, ಅಮರಕೀರ್ತಿ ಮಹಾರಾಜರು ಹಾಗೂ 205 ಕ್ಷುಲ್ಲಕ್ ಮಹಾರಾಜರು ಇದ್ದರು.

ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಚ ಡಿ.ಸುರೇಂದ್ರ ಕುಮಾರ್, ಭಾರತೀಯ ಜೈನ್ ಮಿಲನ್ ಪ್ರಸನ್ನ ಕುಮಾರ್, ಉದ್ಯಮಿ ರವೀಂದ್ರ ಪಾಟೀಲ್ ದಂಪತಿ ನಾಸಿಕ್, ಜೀರ್ಣೋದ್ದಾರ ಸಮಿತಿ ಖಜಾಂಚಿ ರತ್ನವರ್ಮ ಇಂದ್ರ ಇದ್ದರು. ಇದೇ ವೇಳೆ ಶಿಲ್ಪಿ ಶ್ರೀನಿವಾಸ್ ಮತ್ತು ಲೇಖಕ ನಿರಂಜನ್ ಜೈನ್ ಇವರನ್ನು ಸನ್ಮಾನಿಸಲಾಯಿತು.

ಪತ್ರಕರ್ತೆ ನಮಿತಾ ಜೈನ್ ಪಂಜಿಕಲ್ಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.  

ಸಭಾ ಕಾರ್ಯಕ್ರಮ ಬಳಿಕ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಅಮೃತಾ ಅಡಿಗ ಇವರ ಹಾಡುಗಾರಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುನಿರಾಜ ರೆಂಜಾಳ ಅವರು 'ಕಾವ್ಯ ವಾಚನ ಪ್ರವಚನ ವೈಭವ' ಜನಕಥಾ ಪ್ರಸಂಗ ' ಶ್ರೀದೇವಿ ಪದ್ಮಾವತಿ ಚರಿತ್ರೆ ' ಬಗ್ಗೆ ಪ್ರವಚನ ನೀಡಿದರು. 

Leave a Comment