ಮಹಾರಾಷ್ಟ್ರದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿರುವ ಶಿವಸೇನೆಯ ಏಕನಾಥ ಶಿಂಧೆ ಬಣ ಮತ್ತು ಬಿಜೆಪಿ ನೇತೃತ್ವದ ನೂತನ ಸರಕಾರ ಸೋಮವಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುವ ಮೂಲಕ ಶಿಂಧೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಹಾದಿ ಸುಗಮವಾದಂತಾಗಿದೆ.
ಮುಖ್ಯಮಂತ್ರಿ ಏಕನಾಥ ಶಿಂಧೆ ಪರ 164 ಮತಗಳು ಚಲಾವಣೆಯಾಗಿದ್ದವು. ಒಟ್ಟು 288 ಸದಸ್ಯ ಬಲವನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 144 ಸ್ಥಾನಗಳ ಅಗತ್ಯವಿತ್ತು. ನಿರೀಕ್ಷೆಯಂತೆ ಸಿಎಂ ಶಿಂಧೆ ವಿಶ್ವಾಮತ ಯಾಚನೆಯಲ್ಲಿ ಗೆಲುವು ಪಡೆದಿದ್ದಾರೆ.ಇದೇ ವೇಳೆ ಭಾನುವಾರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿಯ ಶಾಸಕ ರಾಹುಲ್ ನರ್ವೇಕರ್ ಆಯ್ಕೆಯಾಗಿದ್ದಾರೆ.
ಏಕನಾಥ ಶಿಂಧೆ ಬಣ 164 ಮತ ಪಡೆದಿದ್ದು, ಶಿವಸೇನಾ ಮೈತ್ರಿ ಕೂಟದ ವಿರೋಧಿ ಗುಂಪು 99 ಮತ ಗಳಿಸುವ ಮೂಲಕ ಮುಖಭಂಗ ಅನುಭವಿಸಿದೆ. ನಿನ್ನೆ ನಡೆದ ಸ್ಪೀಕರ್ ಚುನಾವಣೆಯಲ್ಲಿ ವಿಪಕ್ಷಗಳು 107
ಮತ ಪಡೆದಿತ್ತು. ಆದರೆ ಇಂದು ನಡೆದ ಶಿಂಧೆ ವಿಶ್ವಾಸಮತ ಪರೀಕ್ಷೆಯಲ್ಲಿ ವಿಪಕ್ಷದ ಒಬ್ಬರು ಶಿಂಧೆ ಬಣದ ಪರ ಮತ ಚಲಾಯಿಸಿದ್ದು, ಉಳಿದ ಆರು ಮಂದಿ ಮತ ಚಲಾಯಿಸದೇ ತಟಸ್ಥವಾಗಿ ಉಳಿದಿದ್ದಾರೆ.
ಇಂದು ನಡೆದ ವಿಶ್ವಾಸಮತ ಸಾಬೀತು ವೇಳೆ ಕಾಂಗ್ರೆಸ್ ನ ವಿಜಯ್ ವಾಡೆಟ್ಟಿವಾರ್ ಮತ್ತು ಜೀಶಾನ್ ಸಿದ್ದಿಖಿ ಗೈರುಹಾಜರಾಗಿದ್ದರು. ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಕಲಾಪಕ್ಕೆ ಹಾಜರಾಗಿದ್ದಾರೆ. ಎನ್ ಸಿಪಿಯ ಸಂಗ್ರಾಮ್ ಜಗ್ ತಾಪ್ ಕೂಡಾ ಗೈರಾಗಿದ್ದು, ಈ ನಾಲ್ವರು ನಿನ್ನೆ ನಡೆದ ಸ್ಪೀಕರ್ ಚುನಾವಣಾ ಸಂದರ್ಭದಲ್ಲಿ ಹಾಜರಾಗಿದ್ದರು.
















