ಮಹಾಕುಂಭ ಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಭಕ್ತರು ಸಾವು, 60 ಜನರಿಗೆ ಗಾಯ

Coastal Bulletin
ಮಹಾಕುಂಭ ಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಭಕ್ತರು ಸಾವು, 60 ಜನರಿಗೆ ಗಾಯ

ಪ್ರಯಾಗರಾಜ್: ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದು, ಇದುವರೆಗೆ 25 ಮಂದಿ ಮೃತರನ್ನು ಗುರುತಿಸಲಾಗಿದೆ. ಉಳಿದ ಐವರ ಗುರುತುಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಈ ಘಟನೆಯಲ್ಲಿ 60 ಭಕ್ತರು ಗಾಯಗೊಂಡಿದ್ದಾರೆ ಎಂದು ಮಹಾ ಕುಂಭಮೇಳದ ಡಿಐಜಿ ವೈಭವ್ ಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಮೃತರಾದವರ ಪೈಕಿ ನಾಲ್ವರು ಕರ್ನಾಟಕದವರು ಕೂಡ ಸೇರಿದ್ದಾರೆ.

ಪ್ರಯಾಗ್‌ರಾಜ್‌ ಕಾಲ್ತುಳಿತದ ಹೆಲ್ಪ್‌ಲೈನ್ ನಂಬರ್ 1920. ಮಹಾಕುಂಭ ಮೇಳಕ್ಕೆ ಧಾವಿಸಿದ ಭಕ್ತರ ಕುಟುಂಬದವರು ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಇಂದು ಮೌನಿ ಅಮಾವಾಸ್ಯೆಯಾದ್ದರಿಂದ ಮಹಾಕುಂಭ ಮೇಳಕ್ಕೆ ಭಕ್ತರು ಹೆಚ್ಚಾಗಿ ಆಗಮಿಸಿದ್ದರು. ಈ ವೇಳೆ ತ್ರಿವೇಣಿ ಸಂಗಮದ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.

ಮೃತಪಟ್ಟವರ ಪೈಕಿ ಕರ್ನಾಟಕದ ನಾಲ್ವರು, ಅಸ್ಸಾಂನ ಒಬ್ಬರು, ಗುಜರಾತ್‌ನ ಒಬ್ಬರು ಇದ್ದಾರೆ. ಕೆಲವು ಗಾಯಗೊಂಡ ಭಕ್ತರನ್ನು ಅವರ ಸಂಬಂಧಿಕರು ಕರೆದೊಯ್ದಿದ್ದಾರೆ.

36 ಗಾಯಾಳುಗಳು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಂಭಮೇಳದ ಡಿಐಜಿ ವೈಭವ್ ಕೃಷ್ಣ ಹೇಳಿದರು.

8-10 ಕೋಟಿ ಭಕ್ತರು ಆಗಮಿಸುತ್ತಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಲಭ್ಯವಿರುವ ಎಲ್ಲಾ ಘಾಟ್‌ಗಳನ್ನು ಬಳಸುವಂತೆ ಮತ್ತು ಸಂಗಮ್ ನೋಸ್ ಕಡೆಗೆ ಧಾವಿಸದಂತೆ ಭಕ್ತರ ಬಳಿ ಅವರು ಮನವಿ ಮಾಡಿದ್ದಾರೆ. ಮಹಾಕುಂಭದಿಂದ ಹಿಂದಿರುಗುವ ಯಾತ್ರಿಕರಿಗೆ ಅಧಿಕಾರಿಗಳು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ್ದಾರೆ.

Leave a Comment