ಬಂಟ್ವಾಳ :ಸುರಕ್ಷಾ ಆರೋಗ್ಯ ಕೂಟ ಮತ್ತು ಜೇಸಿಐ ಜೋಡುಮಾರ್ಗ ನೇತ್ರಾವತಿಯ ಆಶ್ರಯದಲ್ಲಿ " ಋತು ಚಕ್ರ ನೈರ್ಮಲ್ಯ ಮತ್ತು ಪೋಷಣೆ "ಎಂಬ ಜಾಗೃತಿ ಅಭಿಯಾನ ಕಾರ್ಯಕ್ರಮವು ಮೇ 27ರಂದು ಶುಕ್ರವಾರ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೋಶನಿ ಪೂಂಜಾ ಮಾತನಾಡಿ, ಹದಿಹರೆಯ ವ್ಯಕ್ತಿಯ ಜೀವನದ ಸಂಕ್ರಮಣ ಕಾಲ. ಈ ಅವಧಿಯಲ್ಲಿ ಹೆಣ್ಣುಮಕ್ಕಳು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು"ಎಂದ ಅವರು,ಋತುಚಕ್ರದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳು ಹಾಗು ಅದರ ಪರಿಹಾರೋಪಾಯಗಳನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು
ಶಾಲಾ ಹಿರಿಯ ಶಿಕ್ಷಕಿ ಸುಜಾತ ವಹಿಸಿದ್ದರು.ಜೆಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್, ಆರೋಗ್ಯ ಸಹಾಯಕಿ ರಶೀದಾ, ಕಾರ್ಯಕ್ರಮ ಸಂಯೋಜಕರಾದ ಭಾರತಿ, ವಸಂತಿ, ವರಮಹಾಲಕ್ಷ್ಮೀ, ಮಂಜುಶ್ರೀ , ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳ ತಾಯಂದಿರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ನಡೆಸಲಾಯಿತು.ವಿದ್ಯಾರ್ಥಿಗಳಾದ ಶ್ರೀಜಾ ಸ್ವಾಗತಿಸಿ, ರಶ್ಮಿತಾ ನಿರ್ವಹಿಸಿದರು.













