ಬಂಟ್ವಾಳ :ದೇಶದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಕಲಿ ಹಿಂದೂಗಳು. ಚುನಾವಣಾ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಪ್ರಜಾಧ್ವನಿ ಯಾತ್ರೆಗೆ ಬದಲಾಗಿ ಬಿಜೆಪಿಗೆ ಬೈಯುವ ಯಾತ್ರೆ ನಡೆಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ನಡೆದ ಗ್ರಾಮ ವಿಕಾಸ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ನಿಜವಾಗಿಯೂ ಪ್ರಜಾಧ್ವನಿ ಯಾತ್ರೆ ನಡೆಸಿದ್ದರೆ ಮಕ್ಕಳ ಅನ್ನ ಕಸಿದ ಪ್ರಸಂಗ, ಶರತ್ ಮಡಿವಾಳ ಹತ್ಯೆ ಪ್ರಕರಣ, ಕೋಟಿ ಕೋಟಿ ಹಗರಣ ಪ್ರತಿಧ್ವನಿ ಕೇಳಿಸುತ್ತಿತ್ತು ಎಂದು ಅವರು ವ್ಯಂಗ್ಯವಾಡಿದರು.ರಾಜ್ಯದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಶಾದಿ ಭಾಗ್ಯ, ಪ್ರವಾಸ ಭಾಗ್ಯ ಮತ್ತಿತರ ಜಾತಿ ರಾಜಕೀಯಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಕಾಂಗ್ರೆಸ್ ಕೋಮು ಗಲಭೆ ಪೋಷಕರು: ಅಣ್ಣಾಮಲೈ
ತಮಿಳ್ನಾಡು ಚುನಾವಣೆ ವೇಳೆ ಡಿಎಂಕೆ ಘೋಷಿಸಿದ ಭರವಸೆ 21 ತಿಂಗಳ ಬಳಿಕವೂ ಈಡೇರಿಸಿಲ್ಲ. ಇದೇ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಪ್ರತೀ ಕುಟುಂಬದ ಮಹಿಳೆಗೆ ರೂ 2ಸಾವಿರ, ಉಚಿತ ವಿದ್ಯುತ್ ನೀಡುವ ಸುಳ್ಳು ಭರವಸೆ ನೀಡಿದೆ. ಚುನಾವಣೆ ಜೊತೆಗೆ ಕಾಂಗ್ರೆಸ್ ಕೋಮು ಗಲಭೆ ಎಂಬ ಕಿಟ್ ಹಿಡಿದುಕೊಂಡು ಬ್ರಿಟೀಷರ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು. ಬಂಟ್ವಾಳದಲ್ಲಿ ಅಭಿವೃದ್ಧಿ ಎಂಬ ಹೊಸ ಶಕೆ ಆರಂಭಗೊಂಡಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಮಾತನಾಡಿ, ಬಂಟ್ವಾಳದ ಗ್ರಾಮ ವಿಕಾಸ ಯಾತ್ರೆ ತಮಿಳ್ನಾಡಿನಲ್ಲಿಯೂ ಅಣ್ಣಾಮಲೈ ಯಾತ್ರೆ ಆರಂಭಿಸಲು ಪ್ರೇರಣೆಯಾಗಲಿದೆ ಎಂದರು.
ಸಮಿತಿ ಸಂಚಾಲಕ ಬಿ.ದೇವದಾಸ ಶೆಟ್ಟಿ ಮಾತನಾಡಿ, ಈ ಕ್ಷೇತ್ರದಲ್ಲಿ 3 ಬಾರಿ ಪಾದಯಾತ್ರೆ ನಡೆಸಿ, ರೂ 1925 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು 1483 ರಸ್ತೆ ನಿರ್ಮಿಸಿದ ಶಾಸಕ ರಾಜೇಶ ನಾಯ್ಕ್
ಜನತೆಗೆ ಹತ್ತಿರವಾಗಿದ್ದಾರೆ ಎಂದರು.
ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಕೆ.ಸೇಸಪ್ಪ ಕೋಟ್ಯಾನ್ ನಿಧನಕ್ಕೆ ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ನುಡಿನಮನ ಸಲ್ಲಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಪಾದಯಾತ್ರೆ ಯಶಸ್ವಿಗೆ ಸ್ಪಂದಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್,ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನಾ ಜಿ.ಕೆ.ಭಟ್, ಪ್ರಮುಖರಾದ ರಾಮದಾಸ್ ಬಂಟ್ವಾಳ್, ವಿಕಾಸ್ ಪುತ್ತೂರು, ಮಾಧವ ಎಸ್.ಮಾವೆ, ಕಸ್ತೂರಿ ಪಂಜ, ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಸುದರ್ಶನ್ ಬಜ ಮತ್ತಿತರರು ಇದ್ದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಬೃಹತ್ ಮೆರವಣಿಗೆ, ಹೂಮಳೆಯ ಸ್ವಾಗತ :
ಕೈಕಂಬ ಪೊಳಲಿ ದ್ವಾರ ದಿಂದ ಬಸ್ತಿ ಪಡ್ಪು ಮೈದಾನದ ವರೆಗೆ ಕಾರ್ಯಕರ್ತರ, ಅಭಿಮಾನಿಗಳ ಬೃಹತ್ ಮೆರವಣಿಗೆ ನಡೆಯಿತು, ಕೇರಳದ ಚೆಂಡೆ, ಶಿಲ್ಪಾ ಕಲಾ, ಚಿಲಿಪಿಲಿ ಬೊಂಬೆ, ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು,
ಮೆರವಣಿಗೆ ಬಿಸಿರೋಡಿನ ಫ್ಲೈ ಓವರ್ ಸಾಗುತಿದ್ದಂತೆ ಮೇಲಿನಿಂದ ಹೂವಿನ ಎಸಳುಗಳನ್ನು ಅತಿಥಿಗಳು ಸಾಗುತಿದ್ದ ವಾಹನದ ಮೇಲೆ ಹಾಗೂ ಕಾರ್ಯಕರ್ತರ ಮೇಲೆ ಸುರಿಯುವ ದೃಶ್ಯ ಮನಮೋಹಕವಾಗಿತ್ತು.
ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಕ್ರೆನ್ ಮೂಲಕ ಬ್ರಹತ್ ಗಾತ್ರದ ಮಾಲೆಯನ್ನು ಶಾಸಕರು ಸೇರಿದಂತೆ ಅತಿಥಿಗಳಿಗೆ ಹಾಕಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಜ26ರಂದು ಮೃತಪಟ್ಟ ಸಾಮಾಜಿಕ ಮುಂದಾಳು ಕೆ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರಿಗೆ ನುಡಿನಮನ ದೊಂದಿಗೆ ಮೌನ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು.














