ಬಂಟ್ವಾಳ: ಧಾರಾಕಾರ ಸುರಿದ ರಣಮಳೆಗೆ ಖರೀದಿಸಿದ ಮನೆ ಎರಡೇ ತಿಂಗಳಲ್ಲಿ ನೆಲಕ್ಕಚ್ಚಿ ವನಿತಾ ಶೆಟ್ಟಿ ಹಾಗೂ ಮೂವರು ಹೆಣ್ಣು ಮಕ್ಕಳ ಬದುಕು ಅತಂತ್ರವಾಗಿತ್ತು. ಆದರೆ ಈಗ 'ಜಾರಂದಗುಡ್ಡೆಯ ಪುಟ್ಟಕ್ಕ' ವನಿತಾ ಶೆಟ್ಟಿ ಕುಟುಂಬದ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ.
ಅಂದು ಬಂಟ್ವಾಳದ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ನಿವಾಸಿ ವನಿತಾ ಶೆಟ್ಟಿ ಖರೀದಿಸಿದ್ದ ಮನೆ ಕುಸಿದು ದಯನೀಯ ಪರಿಸ್ಥಿತಿಗೆ, ಸಹೃದಯ ದಾನಿಗಳು ನೆರವಿಗೆ ಧಾವಿಸಿದರು. ಇದರ ಪರಿಣಾಮವಾಗಿ ಆ.24ರಂದುಗುರುವಾರ ನೂತನ ಮನೆಯ ನಿರ್ಮಾಣಕ್ಕೆ ಬಂಟ ಸಮುದಾಯದ ಹಾಗೂ ವಿವಿಧ ಸಂಘಟನೆಗಳ, ದಾನಿಗಳ ಸಹಕಾರದಿಂದ ಶಿಲಾನ್ಯಾಸ ನಡೆಯಿತು. ಫರಂಗಿಪೇಟೆ ವಲಯ ಬಂಟರ ಸಂಘದ ಅಧ್ಯಕ್ಷ ದೇವದಾಸ್ ಶೆಟ್ಟಿ ಕೊಡ್ಯಾಣ್ ನೇತೃತ್ವ ವಹಿಸಿದ್ದರು.
ಕನಪಾಡಿ ಶ್ರೀ ವಿಷ್ಣುಮೂರ್ತಿ ದೇಗುಲದ ಅರ್ಚಕ ಶಿವರಾಮ
ಭಟ್ ದೇವಂದಬೆಟ್ಟು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮನೆ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯ ಮನೋಜ್ ವಲವೂರ್, ಪ್ರಮುಖರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರತಾಪ್ ಶೆಟ್ಟಿ ಸುಜೀರ್, ಗಿರೀಶ್ ಶೆಟ್ಟಿ ಕುಂಪನಮಜಲು, ಕಿಶೋರ್, ಇಂಜಿನಿಯರ್ ಪ್ರವೀಣ್ ಶೆಟ್ಟಿ ಹಾಗೂ ವನಿತಾ ಶೆಟ್ಟಿ ಕುಟುಂಬಸ್ಥರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.













