ಬಂಟ್ವಾಳ:ಇಲ್ಲಿನ ಮಾರ್ನಬೈಲು ನಿವಾಸಿ, ಪ್ರತಿಷ್ಠಿತ 'ಬಜಾರ್' ಸಮೂಹ ಸಂಸ್ಥೆ ಆಡಳಿತ ಪಾಲುದಾರ ಎಸ್. ಎಂ. ಗೋಪಾಲಕೃಷ್ಣ ಆಚಾರ್ಯ (56) ಇವರು ಅಸೌಖ್ಯದಿಂದಾಗಿ ಶುಕ್ರವಾರ ಮಧ್ಯಾಹ್ನ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ, ಸಹೋದರ, ಸಹೋದರಿ ಇದ್ದಾರೆ.
ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿ ಸಸದಸ್ಯರಾಗಿ, ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘ, ವಿಶ್ವಕರ್ಮ ಸಮುದಾಯ ಭವನ ಕಟ್ಟಡ ಸಮಿತಿ ಮಾರ್ಗದರ್ಶಕರಾಗಿ, ಅರೆಮಾದನಹಳ್ಳಿ ಗುರುಶಿವ ಸುಜ್ಞಾನ ಸ್ವಾಮಿ ಮಹಾಸಂಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ಆನೆಗುಂದಿ ಮಹಾ ಸಂಸ್ಥಾನ ಮತ್ತಿತರ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆ ಜೊತೆಗೆ ಕೊಡುಗೈ ದಾನಿಯಾಗಿದ್ದರು. ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ದೇವಸ್ಥಾನ ಮೊಕ್ತೇಸರರಾಗಿ, ಸಜಿಪ ಮಾಗಣೆ ನಾಲ್ಕೈತ್ತಾಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾಗಿ, ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿ
ಸಮಿತಿ ಅಧ್ಯಕ್ಷರಾಗಿ, ಸರ್ಕಾರಿ ಪ್ರಾಥಮಿಕ ಉಪ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.
ಇವರಿಗೆ ಮೈಸೂರು ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಗೌರವ ಡಾಕ್ಟರೆಟ್, ರಾಷ್ಟ್ರ ವಿಭೂಷಣ ಪ್ರಶಸ್ತಿ, ಬಸವ ಪ್ರಶಸ್ತಿ, ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್, 2022ರ ಕರ್ನಾಟಕ ಬ್ಯುಸಿನೆಸ್ ಐಕೊನ್ ಪ್ರಶಸ್ತಿ, ಬುದ್ಧ ಶಾಂತಿ ರಾಜ್ಯ ಪ್ರಶಸ್ತಿ ಲಭಿಸಿತ್ತು. ಮಾರ್ನಬೈಲು ಬಜಾರ್ ಬೀಡಿ ಸಂಸ್ಥೆಯಲ್ಲಿ ನೂರಾರು ಮಂದಿಗೆ ಉದ್ಯೋಗದಾತರಾಗಿದ್ದರು.
ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 10 ಗಂಟೆಗೆ ಮಾರ್ನಬೈಲು ಮನೆ ಬಳಿ ನೆರವೇರಲಿದೆ. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ ಸಂತಾಪ ವ್ಯಕ್ತಪಡಿಸಿದ್ದಾರೆ.














