ಬಂಟ್ವಾಳ: ಬಂಟ್ವಾಳದಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಛೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ರೂ. 1432.13 ಕೋಟಿ ಅತ್ಯುತ್ತಮ ವ್ಯವಹಾರ ನಡೆಸಿದ್ದು ಸುಮಾರು ರೂ. 5.28 ಕೋಟಿ (ತಾತ್ಕಾಲಿಕ) ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಸಮಾಜರತ್ನ ದಿ.ಡಾ| ಅಮ್ಮೆಂಬಳ ಬಾಳಪ್ಪರವರ ನೇತೃತ್ವ ಹಾಗೂ ಸಹಕಾರಿ ಧುರೀಣ ಬಿ.ಹೂವಯ್ಯ ಮೂಲ್ಯರ ಸಾರಥ್ಯದಲ್ಲಿ 131 ಸದಸ್ಯರನ್ನೊಳಗೊಂಡು ರೂ. 22,620 ಪಾಲು ಬಂಡವಾಳದೊಂದಿಗೆ ಸ್ಥಾಪಿಸಲ್ಪಟ್ಟ ಸಮಾಜ ಸೇವಾ ಸಹಕಾರಿ ಸಂಘವು ಪ್ರಸ್ತುತ 17 ಶಾಖೆಗಳನ್ನು ಹೊಂದಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಸಂಘದ ಪುಂಜಾಲಕಟ್ಟೆ, ಮುಡಿಪು ಮತ್ತು ಉಪ್ಪಿನಂಗಡಿ ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ಆರ್ಥಿಕ ವರ್ಷ 2025-26ರ ಅಂತ್ಯಕ್ಕೆ ಸಂಘದಲ್ಲಿ 9319 ‘ಎ’ ತರಗತಿ, 5921 ‘ಬಿ’ ತರಗತಿ ಸದಸ್ಯರಿದ್ದು ರೂ. 8.28 ಕೋಟಿ ಪಾಲು ಬಂಡವಾಳ ಹೊಂದಿರುತ್ತದೆ. 22.64 ಕೋಟಿ ರೂ. ನಿಧಿಗಳು, 62.88 ಕೋಟಿ ರೂ. ವಿನಿಯೋಗಗಳು, 264.08 ಕೋಟಿ ರೂ. ಠೇವಣಾತಿಗಳು ಇದ್ದು 248.99 ಕೋಟಿ ರೂ. ಹೊರಬಾಕಿ ಸಾಲಗಳು ಇರುತ್ತದೆ. ಸಂಘದದು lಡಿಯುವ ಬಂಡವಾಳ ರೂ. 297.71 ಕೋಟಿ ಆಗಿರುತ್ತದೆ.
ಆಡಿಟ್ ವರ್ಗಿಕರಣದಲ್ಲಿ ಸತತವಾಗಿ “ಎ” ತರಗತಿ ಹೊಂದಿರುವ ಸಂಘವು ಸಂಪೂರ್ಣ ಗಣಕೀಕೃತ ಸಿಬಿಎಸ್ ತಂತ್ರಾಂಶದೊಂದಿಗೆ ಇ-ಕಲೆಕ್ಷನ್
ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುತ್ತದೆ. ಸಂಘವು ಸದಸ್ಯರ ಅನುಕೂಲಕ್ಕಾಗಿ ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯವನ್ನು, ಕೆಲವು ಶಾಖೆಗಳಲ್ಲಿ ಸೇಫ್ ಲಾಕರ್ ಸೌಲಭ್ಯವನ್ನು, ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯ, ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ, ಸದಸ್ಯರ ಗಂಭೀರವಾದ ಕಾಯಿಲೆಗೆ ಆರ್ಥಿಕ ಸಹಾಯಧನ ಹೀಗೆ ಹಲವಾರು ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತ ಬಂದಿದೆ. ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ ಹಲವು ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಅಲ್ಲದೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಂಘವು ದಕ್ಷಿಣ ಕನ್ನಡ ಜಿಲ್ಲೆಯ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಪಡೆದುಕೊಂಡಿರುತ್ತದೆ.
ಸಂಘದ 18ನೇ ಶಾಖೆಯು ಉಳ್ಳಾಲ ತಾಲೂಕಿನ ಬೋಳಿಯಾರು ಎಂಬಲ್ಲಿ ಕೇಶವ ಎಸ್. ಭಂಡಾರಿಯವರ ಕಟ್ಟಡದಲ್ಲಿ 17-05-2026ನೇ ಆದಿತ್ಯವಾರ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದ್ದಾರೆ.














