ಬಿ.ಸಿ.ರೋಡ್ : ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ನಲ್ಕೆಮಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಕಾರ್ಯಕ್ರಮಗಳ ಸುದ್ದಿ ಬರೆಯುವ ವಿಧಾನದ ಬಗ್ಗೆ ಕಾರ್ಯಾಗಾರ ನಡೆಯಿತು.
ಅನುಭವಿ ಪತ್ರಕರ್ತ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಚಿಕ್ಕ ವಯಸ್ಸಿನಲ್ಲಿಯೇ ಬರವಣಿಗೆಯ ಹಾದಿ ಹಿಡಿಯುವುದು ಒಳ್ಳೆಯದು. ಮಕ್ಕಳು ತಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮದಲ್ಲಿ ನಡೆಯುವ ಸಭಾಕಾರ್ಯಕ್ರಮವನ್ನು ಗಮನ ಹರಿಸಿ ವರದಿ ಮಾಡುವ ಮೂಲಕ ಬಾಲ್ಯದಿಂದಲೇ ಬರಹಗಾರರಾಗಲು ಸಾಧ್ಯ. ನಿರಂತರ ಪತ್ರಿಕೆಗಳನ್ನು ಓದುವ ಮೂಲಕ
ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ತಮ್ಮಲ್ಲಿರುವ ಜ್ಞಾನದಿಂದ ಬರವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ಯಾದವ ಅಗ್ರಬೈಲು ಈ ಸಂದರ್ಭ ಉಪಸ್ಥಿತರಿದ್ದರು. ಸಹಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ ಧನ್ಯವಾದ ನೀಡಿದರು. ಸಹಶಿಕ್ಷಕಿ ಶಶಿಕಲಾ, ಜಗನ್ನಾಥ, ಮಮತಾ, ಅಕ್ಷತಾ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.














