ನವದೆಹಲಿ: ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಲಡ್ಡು ಪ್ರಸಾದಕ್ಕೆ ಅತ್ಯಂತ ಕಳಪೆ ಮಟ್ಟದ ತುಪ್ಪಗಳಾದ ದನದ ಕೊಬ್ಬು, ಮೀನನ ಎಣ್ಣೆ ಬಳಸಲಾಗಿದೆ ಅನ್ನೋ ಗಂಭೀರ ಆರೋಪ ಇದೀಗ ದೇಶಾದ್ಯಂತ ಹಿಂದೂಗಳ ನಂಬಿಕೆಗೆ ಕೊಡಲಿ ಪೆಟ್ಟು ನೀಡಿದಂತಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿರುವ ಆರೋಪ ಹಾಗೂ ನೀಡಿರುವ ಲ್ಯಾಬ್ ರಿಪೋರ್ಟ್ ಕಳ್ಳಾಟ ನಡೆದಿರುವುದು ಮೇಲ್ನೋಟಕ್ಕೆ ಸಾಬೀತುಪಡಿಸುತ್ತಿದೆ. ಈ ಘಟನೆ ಕೇವಲ ತಿರುಪತಿ ತಿಮ್ಮಪ್ಪನ ಭಕ್ತರ ಆತಂಕ ಮಾತ್ರವಲ್ಲ, ದೇಶಾದ್ಯಂತ ಇರುವ ಶ್ರದ್ಧಾಕೇಂದ್ರಗಳ ಭಕ್ತರ ಆತಂಕ ಹೆಚ್ಚಿಸಿದ ಈ ಪೈಕಿ ಆಯೋಧ್ಯೆ ರಾಮ ಮಂದಿರ ಇದೇ ಲಡ್ಡುವಿನಿಂದ ಅಪವಿತ್ರಗೊಂಡಿರುವ ಆತಂಕ ಎದುರಾಗಿದೆ.
ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನೆಣ್ಣೆ ಬಳಕೆಯಾಗಿದ್ದರೆ ಅಯೋಧ್ಯೆ ರಾಮ ಮಂದಿರ ಅಪವಿತ್ರಗೊಂಡಿರುವುದು ಖಚಿತವಾಗಲಿದೆ. ಕಾರಣ 2024ರ ಜನವರಿಯಲ್ಲಿ ಆಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿಸಲಾಗಿತ್ತು. ರಾಮ ಮಂದಿರ ಉದ್ಘಾಟನೆ ವೇಳೆ ಅಂದಿನ ಜಗನ್ಮೋಹನ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ 1 ಲಕ್ಷ ತಿರುಪತಿ ಲಡ್ಡು ಪ್ರಸಾದವನ್ನು ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಕಳುಹಿಸಿಕೊಟ್ಟಿತು. ಈ ಪ್ರಸಾದವನ್ನು ರಾಮ ಮಂದಿರ ಆಡಳಿತ ಮಂಡಳಿ ಭಕ್ತರಿಗೆ ನೀಡಿತ್ತು. ಈ ಆರೋಪ ನಿಜವಾಗಿದ್ದರೆ ಅಯೋಧ್ಯೆ ರಾಮ ಮಂದಿರ ಕೂಡ ಅಪವಿತ್ರಗೊಂಡಿರುವುದು ಖಚಿತವಾಗಲಿದೆ ಅನ್ನೋ ಆತಂಕ ಭಕ್ತರಲ್ಲಿ ಮನೆ ಮಾಡಿದೆ.
ತಿರುಪತಿ ಲಡ್ಡು ಪ್ರಸಾದಲ್ಲಿ ದನದ ಕೊಬ್ಬು, ಮೀನನ ಎಣ್ಣೆ ಬಳಕೆ ನಿಜವಾಗಿದ್ದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಯೋಧ್ಯೆ ರಾಮ ಮಂದಿರ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಆಗ್ರಹಿಸಿದ್ದರು. ಈ ಬೆಳವಣಿಗೆ ಹಿಂದೂ ಶ್ರದ್ಧಾ ಕೇಂದ್ರದ
ನಂಬಿಕೆ ಮೇಲೆ ಉದ್ದೇಶಪೂರ್ವಕವಾಗಿ ನಡೆಸಿದ ದಾಳಿ ಎಂದು ಸತ್ಯೇಂದ್ರ ದಾಸ್ ಹೇಳಿದ್ದರು.
ಚಂದ್ರಬಾಬು ನಾಯ್ಡು ಆರೋಪಗಳನ್ನು ಮಾಜಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ನಿರಾಕರಿಸಿದ್ದಾರೆ. ಭಕ್ತರ ನಂಬಿಕೆ ಜೊತೆ ಚಂದ್ರಬಾಬು ನಾಯ್ಡು ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು. ಆದರೆ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಕುರಿತು ಪರೀಕ್ಷಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಬೇಕು. ಇಷ್ಟೇ ಅಲ್ಲ ದೇಶಾದ್ಯಂತ ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳ ಪ್ರಸಾದವನ್ನು ಸರ್ಕಾರ ಮಾರಾಟದ ವಸ್ತುವಾಗಿ ಪರಿಗಣಿಸಿರುವ ಸಾಧ್ಯತೆ ಇದೆ. ಹೀಗಾಗಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿರುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲಾ ದೇವಸ್ಥಾನಗಳ ಪ್ರಸಾದ ಪರೀಕ್ಷಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಇತ್ತ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಪ್ರಕರಣದ ಸಂಪೂರ್ಣ ವರದಿ ನೀಡುವಂತೆ ಕೋರಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.















