ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಕೋಮು ಗಲಭೆಗೆ ಯತ್ನ; ಪೊಲೀಸರಿಂದ ಬಿಗಿ ಬಂದೋಬಸ್ತು

Coastal Bulletin
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಕೋಮು ಗಲಭೆಗೆ ಯತ್ನ; ಪೊಲೀಸರಿಂದ ಬಿಗಿ ಬಂದೋಬಸ್ತು

ಮಂಗಳೂರು: ನಾಗಮಂಗಲ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವ ವೇಳೆ ಈದ್ ಮಿಲಾದ್ ಮೆರವಣಿಗೆ ಹೇಗೆ ಮಾಡ್ತೀರಿ ನೋಡೋಣ ಎಂದು ಹಿಂದೂಪರ ಮುಖಂಡ ಶರಣ್ ಪಂಪ್ವೆಲ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಸದ್ಯ ಇದನ್ನು ಸವಾಲಾಗಿ ತೆಗೆದುಕೊಂಡಿರುವ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಧಮ್ ಇದ್ರೆ ಬಿಸಿ ರೋಡ್‌ಗೆ (BC Road) ಬಾ ಎಂದು ಓಪನ್ ಚಾಲೆಂಜ್ ಹಾಕಿದ್ದರು.

ಹಿಂದೂಪರ ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್‌ ಗೆ ಓಪನ್ ಚಾಲೆಂಜ್ ನೀಡಿರುವ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್, ವಾಟ್ಸಪ್ ಆಡಿಯೋ ಮೂಲಕ ಧಮ್ ಇದ್ರೆ ಮಿಲಾದ್ ಮೆರವಣಿಗೆ ತಡಿ ಎಂದು ಸವಾಲ್ ಹಾಕಿದ್ದಾರೆ. ‘ಶರಣ್ ಪಂಪ್ವೆಲ್ ಧಮ್ ಇದ್ರೆ ಬಿಸಿರೋಡ್ ಮೆರವಣಿಗೆ ತಡಿ, ಮೆರವಣಿಗೆ ಸಾಗುವಾಗ ಧಮ್ ಇದ್ರೆ ಬಂದು ನಿಲ್ಲು, ನೀನು ಯಾವ ಸ್ಥಳಕ್ಕೆ ಬರ್ತಿ ಅಂತಾ ಹೇಳು, ಸೋಮವಾರ ಬೆಳಗ್ಗೆ 7 ಗಂಟೆಗೆ ಮೆರವಣಿಗೆ ನಡೆಯುತ್ತದೆ, ನೀನು ಬಂದು ಮೆರವಣಿಗೆ ಆಗುವಾಗ ಧಮ್ ಇದ್ರೆ ನಿಲ್ಲು ಎಂದು ಪ್ರಚೋದನಾತ್ಮಕ ರಿತಿಯಲ್ಲಿ ಆಡಿಯೋ ಸಂದೇಶ ರವಾನಿಸಿದ್ದಾರೆ.

ವಾಟ್ಸಪ್ ನಲ್ಲಿ ಆಡಿಯೋ ಸವಾಲು ಹಾಕಿರುವ ಷರೀಫ್ ಅವರ ಸವಾಲು ಸ್ವೀಕರಿಸಿರುವ ಹಿಂದೂ ಸಂಘಟನೆ ಮುಖಂಡರು, ಬಿಸಿರೋಡ್ ಚಲೋಗೆ ಕರೆ

ಕೊಟ್ಟಿದ್ದಾರೆ. ವಿಶ್ವ ಹಿಂದೂ ಪರಿಷತ್ ,ಭಜರಂಗದಳದಿಂದ ಬಿಸಿರೋಡ್ ಚಲೋಗೆ ಕರೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಿಸಿರೋಡ್ ಮೆರವಣಿಗೆ ಸಾಗುವಾಗ ಮೆರವಣಿಗೆ ಎದುರು ನಿಲ್ಲುವ ಸವಾಲು ಸ್ವೀಕರಿಸಿದ ಶರಣ್ ಪಂಪ್ವೆಲ್ ಸಾಮಾಜಿಕ ಜಾಲತಾಣ ಮೂಲಕ ಹಿಂದೂ ಸಂಘಟನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ.


ಇನ್ನೂ ಎರಡೂ ಕೋಮಿನ ಮುಖಂಡರ ಈ ರೀತಿಯಾದ ಉದ್ಧಟತನದ ಹೇಳಿಕೆಯಿಂದಾಗಿ ಆತಂಕದ ವಾತಾವರಣ  ನಿರ್ಮಾಣವಾಗಿದೆ. ಇಂದು (ಸೆಪ್ಟೆಂಬರ್ 16ರಂದು) ಬಂಟ್ವಾಳ ನಗರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದ್ದು, ಹಿಂದೂ ಕಾರ್ಯಕರ್ತರು ಜಮಾವಣೆಗೊಂಡಿರುವ ಬಗ್ಗೆ ವರದಿಯಾಗಿದೆ. 

ಆಡಿಯೋ ಸವಾಲು ಹಾಕಿರುವ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಷರಿಫ್ ಹಾಗೂ ಹಿಂದೂ ಮುಖಂಡ ಪ್ರಸಾದ್ ಅತ್ತಾವರ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

Leave a Comment