ಬಂಟ್ವಾಳ : ಯುವಜನತೆಯ ಶಕ್ತಿಯು ದೇಶದ ಭವಿಷ್ಯವನ್ನೇ ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಶಕ್ತಿಗೆ ಸರಿಯಾದ ಮಾರ್ಗದರ್ಶನ ದೊರಕಿದಾಗ ಅದು ಸಮಾಜಮುಖಿ ಪರಿವರ್ತನೆಯ ಶ್ರೇಷ್ಠ ಸಾಧನವಾಗಬಹುದು. ಇಂತಹ ದೃಷ್ಟಿಯಿಂದ ಯುವವಾಹಿನಿ ಬಂಟ್ವಾಳ ಘಟಕಕ್ಕೆ ಗುರುತತ್ವವಾಹಿನಿಯ ಯಶಸ್ವೀ ಪಯಣ ಪ್ರೇರಕ ಮತ್ತು ಪೂರಕ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ತಿಳಿಸಿದರು.
ಅವರು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಇವರ ಬ್ರಹ್ಮಶ್ರೀ ನಿಲಯದಲ್ಲಿ ನಡೆದ ಗುರುತತ್ವವಾಹಿನಿ 50ರ ಮಾಲಿಕೆ ಸುವರ್ಣ ಸಂಭ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ಧರ್ಮದ ನೈತಿಕ ತತ್ವಗಳನ್ನು ಮೆರೆದ ನಾರಾಯಣಗುರುಗಳು ಭಾರತೀಯ ಆಧ್ಯಾತ್ಮಿಕ ಲೋಕದ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರು. ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಕವಿ ಎಂದೇ ಹೆಸರಾಗಿರುವ ಅವರು, ವಿಶ್ವಮಾನವ ಧರ್ಮ ಎಂಬ ಮಹೋನ್ನತ ಕಲ್ಪನೆಯ ಮೂಲಕ ಸಮಾಜದಲ್ಲಿ ಶ್ರೇಷ್ಠ ಬದಲಾವಣೆಗಳ ಸುಳಿವನ್ನು ತಂದರು, ಈ ಮೂಲಕ ಸರ್ವರನ್ನೂ ಒಳಗೊಂಡ ವಿಶ್ವ ಮಾನವಧರ್ಮವನ್ನು ಗುರುಗಳು ಸ್ಥಾಪಿಸಿದರು, ಗುರುಗಳ ಸಂದೇಶ ನಮ್ಮ ಮನದಲ್ಲಿ ಜಾಗೃತಗೊಳ್ಳಬೇಕು ಎಂದು ರಾಷ್ಟ್ರೀಯ ತರಬೇತುದಾರ ಉದಯ್ ಜ್ಯೋತಿಗುಡ್ಡೆ ಅಭಿಪ್ರಾಯ
ಪಟ್ಟರು.
ಗುರುತತ್ವವಾಹಿನಿ ಮೂಲಕ ಗುರುಸಂದೇಶವನ್ನು ಮನೆ ಮನೆಗಳಿಗೆ ತಲುಪಿಸಿ ಅವರ ಮನದಲ್ಲಿ ನೆಲೆ ಕಂಡುಕೊಳ್ಳುವ ಕಾರ್ಯದಲ್ಲಿ ಯುವವಾಹಿನಿ ಬಂಟ್ವಾಳ ಯಶಸ್ವಿಯಾಗಿದೆ, ಈ ಸಾಧನೆಯ ರೂವಾರಿ ಮತ್ತು ಯಶಸ್ಸು ಪ್ರಜಿತ್ ಅಮೀನ್ ಇವರಿಗೆ ಸಲ್ಲಬೇಕು ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು.
ಗುರುತತ್ವವಾಹಿನಿ 50 ಮಾಲಿಕೆಗಳಿಗೆ ಸತತವಾಗಿ ಸಹಕಾರ ನೀಡಿದ ದಿನೇಶ್ ಸುವರ್ಣ ರಾಯಿ, ಪ್ರೇಮನಾಥ್ ಕೆ, ಮಹೇಶ್ ಬೊಳ್ಳಾಯಿ, ರಾಜೇಶ್ ಅಮ್ಟೂರು, ಪುರುಷೋತ್ತಮ ಕಾಯರ್ಪಲ್ಕೆ, ರಾಜೇಶ್ ಸುವರ್ಣ, ಚಿನ್ನಾ ಕಲ್ಲಡ್ಕ, ನಾಗೇಶ್ ಪೊನ್ನೊಡಿ, ಸಾತ್ವಿಕ್ ದೇರಾಜೆ, ಗಣರಾಜ್ ಭಟ್ ಕೆದಿಲ, ಇವರುಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಂಡ ಭಾರತ ವಸುಧೈವ ಭಜನಾ ಕುಟುಂಬದ ಭಜಕರು, ಯುವವಾಹಿನಿ ಬಂಟ್ವಾಳ ಘಟಕದ ನಿರ್ದೇಶಕರುಗಳು, ಮಾಜಿ ಅಧ್ಯಕ್ಷರುಗಳು, ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

















