ಬಂಟ್ವಾಳ :ಭಜನೆ ಎಂದರೆ ಸಂಸ್ಕಾರ,ಅದರೊಂದಿಗೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ನಡೆಯಬೇಕಿದೆ,ಭಜನೆಯ ಮೂಲಕ ಮನ ಪರಿವರ್ತನೆ ಸಾಧ್ಯವಿದೆ, ಭಾರತ ಆದ್ಯಾತ್ಮಿಕತೆಯ ಬೆಳಕು,ಆದ್ದರಿಂದ ಧರ್ಮಕ್ಕೆ ಘಾಸಿಯಾದರೆ ನಮಗೆ ಉಳಿಗಾಲವಿಲ್ಲ,ಧರ್ಮ ರಕ್ಷಣೆಗೆ ಪಣ ತೊಡೋಣ, ನಮ್ಮ ಮನಸ್ಸನ್ನು ಒಳ್ಳೆಯದರ ಕಡೆಗೆ ಪ್ರೆರೇಪಿಸಿ ಭಗವಂತ ಕೊಟ್ಟ ಜೀವನವನ್ನು ಸಾರ್ಥಕ ಪಡಿಸೋಣ, ಕೃಷ್ಣನ ನುಡಿ, ರಾಮನ ನಡೆ ನಮ್ಮದಾಗಲಿ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ (ರಿ.)ಇದರ 53ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಅಂಗವಾಗಿ ಜ. 6ರಂದು ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಾಚನವಿತ್ತರು.
ಮುಖ್ಯ ಅತಿಥಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿ,ಸರಳ ಭಾಷೆಯಲ್ಲಿ ಭಗವಂತನನ್ನು ಪ್ರಾರ್ಥಿಸಲು ಭಜನೆಯಿಂದ ಸಾಧ್ಯ, ರಾಮನ ನಡವಳಿಕೆ ಸಮಾಜಕ್ಕೆ ಆದರ್ಶ,ಜನ ಸಾಮಾನ್ಯರ ಅವಶ್ಯಕತೆಗೆ ಅನುಗುಣವಾಗಿ ಧಾರ್ಮಿಕ ಹಸಿವನ್ನು ಪ್ರಾಮಾಣಿಕ ಹಾಗೂ ಪರಿಣಾಮಕಾರಿಯಾಗಿ ಭಜನಾ ಮಂದಿರ ಮಾಡುತ್ತಿದೆ,ಎಲ್ಲಾ ಧರ್ಮದ ಜನರನ್ನು ಪ್ರೀತಿಸುವ ಗುಣ ನಮ್ಮದಾಗಲಿ ಎಂದು ಹೇಳಿದರು.
ಸಮಾಜ ಸೇವಕ ನಾರಾಯಣ ಹೊಳ್ಳ ಹೊಳ್ಳರಬೈಲು ಗುತ್ತು ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ದೆ ಇಟ್ಟು ಇರುವಷ್ಟು ಕಾಲ ಧಾರ್ಮಿಕ ಸೇವೆಯಲ್ಲಿ ತೊಡಗಿ ಆತ್ಮ ಉದ್ದಾರ ಮಾಡುವ ಎಂದು ಹೇಳಿದರು
ವಿಶ್ವಹಿಂದೂ ಪರಿಷತ್ ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಮಾತನಾಡಿ, ಧರ್ಮ ರಕ್ಷಣೆಯ ಜೊತೆಗೆ ಧಾರ್ಮಿಕ ಆಚರಣೆಯನ್ನು ಶ್ರದ್ದಾ ಭಕ್ತಿಯಿಂದ ಮಾಡೋಣ, ಧಾರ್ಮಿಕತೆಗೆ ದಕ್ಕೆ ಬಂದಾಗ ದಿಟ್ಟವಾಗಿ ಎದುರಿಸುವ ಗುಣ
ನಮ್ಮದಾಗಲಿ ಎಂದರು.
ವೇದಿಕೆಯಲ್ಲಿ ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ, ಕಳ್ಳಿಗೆ ಗ್ರಾ ಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಆಡಳಿತ ಸಮಿತಿಯ ಗೌರವ ಸಲಹೆಗಾರ ಶಶಿಧರ್ ಬ್ರಹ್ಮರಕೂಟ್ಲು,ಭಜನಾ ಮಹೋತ್ಸವ ಸಮಿತಿಯ ಅಧ್ಯಕ್ಷ ಕವಿರಾಜ್ ಚಂದ್ರಿಗೆ,ಮಾತೃ ಮಂಡಳಿಯ ಅಧ್ಯಕ್ಷೆ ಗೀತಾ ಆನಂದ ದೇವಾಡಿಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಾಧಕರಾದ ಮನೋಜ್ ಕನಪಾಡಿ, ಸದಾಶಿವ ಡಿ ತುಂಬೆ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತೆ ಕುಮಾರಿ ರಶ್ಮಿತಾ ಭಂಡಾರಿ ಪೆರಿಯೋಡಿಬೀಡು, ಇವರನ್ನು ಸನ್ಮಾನಿಸಲಾಯಿತು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಭಜನಾ ಮಂದಿರದ ಅಧ್ಯಕ್ಷ ನವೀನ ಬಂಗೇರ ಪಲ್ಲ ಪ್ರಾಸ್ತವಿಕವಾಗಿ ಮಾತನಾಡಿದರು, ಪ್ರ. ಕಾರ್ಯದರ್ಶಿ ಹೇಮಂತ್ ಸನಿಲ್ ಸ್ವಾಗತಿಸಿ, ಉತ್ಸವ ಸಮಿತಿಯ ಕಾರ್ಯದರ್ಶಿ ಸಂದೇಶ್ ದರಿಬಾಗಿಲು ಧನ್ಯವಾದವಿತ್ತು, ಕಲಾವಿದ ಹೆಚ್ ಕೆ ನೈನಾಡು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚೈತನ್ಯ ಕಲಾವಿದರು ಬೈಲೂರು ಇವರಿಂದ "ಅಷ್ಟಮಿ" ಸಾಂಸಾರಿಕ ಹಾಸ್ಯಮಯ ತುಳು ನಾಟಕ ನಡೆಯಿತು.














